Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ 2026 – ಟ್ಯಾಕ್ಸಿ, ಆಟೋ, ಸರಕು ವಾಹನಕ್ಕೆ 3 ಲಕ್ಷ ರೂ. ಸಬ್ಸಿಡಿ – ಅರ್ಜಿ ಆಹ್ವಾನ
ಸ್ವಂತ ವಾಹನ ಖರೀದಿಸಿ ಚಾಲಕನಿಂದ ಮಾಲೀಕನಾಗುವ ಕನಸು ಕಾಣುವ ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ತೆರೆದಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಸ್ವಾವಲಂಬಿ ಸಾರಥಿ ಯೋಜನೆಯಡಿ ಟ್ಯಾಕ್ಸಿ, ಸರಕು ವಾಹನ ಮತ್ತು ಪ್ರಯಾಣಿಕ ಆಟೋ ರಿಕ್ಷಾ ಖರೀದಿಗೆ ಸಹಾಯಧನ ನೀಡಲು ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ಸಾಲ ಮಂಜೂರಾದ ಅರ್ಹರಿಗೆ ವಾಹನ ಮೌಲ್ಯದ ಶೇ. 50 ಅಥವಾ ಗರಿಷ್ಠ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗುತ್ತದೆ.

ಕಳೆದ ಸಾಲಿನಲ್ಲಿ ನಿಗಮವು 623 ಟ್ಯಾಕ್ಸಿ ಮತ್ತು 174 ಸರಕು ವಾಹನ ಫಲಾನುಭವಿಗಳಿಗೆ ಒಟ್ಟು ಸುಮಾರು 20 ಕೋಟಿ ರೂಪಾಯಿ ಸಹಾಯಧನ ನೀಡಿತ್ತು. ಈ ಬಾರಿಯೂ ಅದೇ ಮಾದರಿಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25, 2026. ಮೊಬೈಲ್ನಿಂದಲೇ ಅಥವಾ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಹಾಕಬಹುದು.
ಯಾರಿಗೆ ಸಿಗುತ್ತದೆ ಈ ಸೌಲಭ್ಯ.?
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ ಸಮುದಾಯಕ್ಕೆ ಸೇರಿದವರು ಮಾತ್ರ ನಿಗಮದ ಈ ಯೋಜನೆಗೆ ಅರ್ಹರು. ವಯಸ್ಸು 18ರಿಂದ 55 ವರ್ಷದೊಳಗಿರಬೇಕು.
ಕುಟುಂಬದ ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು. ಆದಾಯ ಮತ್ತು ಜಾತಿ ಪ್ರಮಾಣಪತ್ರ ತಹಶೀಲ್ದಾರರಿಂದ ಪಡೆದಿರಬೇಕು.
ಕುಟುಂಬದಲ್ಲಿ ಯಾರೂ ರಾಜ್ಯ, ಕೇಂದ್ರ ಅಥವಾ ಸಾರ್ವಜನಿಕ ವಲಯದಲ್ಲಿ ಸರ್ಕಾರಿ ನೌಕರರಾಗಿರಬಾರದು. ಕಳೆದ 5 ವರ್ಷಗಳಲ್ಲಿ ನಿಗಮದ ಬೇರೆ ಯಾವುದೇ ಯೋಜನೆಯಡಿ ಸಾಲ ಅಥವಾ ಸಬ್ಸಿಡಿ ಪಡೆದಿದ್ದರೆ ಈ ಬಾರಿ ಅವಕಾಶ ಸಿಗುವುದಿಲ್ಲ. ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಡೆದ ಚಾಲ್ತಿಯಲ್ಲಿರುವ ಚಾಲನಾ ಪರವಾನಗಿ ಕಡ್ಡಾಯ. ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.
ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ ಹಳದಿ ಬೋರ್ಡ್ನಲ್ಲಿ ನೋಂದಾಯಿಸಬೇಕು. ನಗರ ಪ್ರದೇಶದಲ್ಲಿ ಪ್ರಯಾಣಿಕ ಆಟೋ ನಡೆಸುವವರಿಗೆ ಪರಮಿಟ್ ಅಗತ್ಯ.
ಸಾಲದ ಅವಧಿಯಲ್ಲಿ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಬಾರದು. ರಸ್ತೆ ತೆರಿಗೆ ಮತ್ತು ವಿಮೆ ಪಾವತಿ ಮಾಹಿತಿಯನ್ನು ಜಿಲ್ಲಾ ನಿಗಮ ಕಚೇರಿಗೆ ಸಲ್ಲಿಸಬೇಕು.
ವಾಹನಕ್ಕೆ ಎಷ್ಟು ಸಹಾಯಧನ.?
ರಾಷ್ಟ್ರೀಕೃತ ಅಥವಾ ಪರಿಶಿಷ್ಟ ಬ್ಯಾಂಕ್ಗಳು ಹಾಗೂ ಆರ್ಬಿಐ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳು ಸಾಲ ಮಂಜೂರು ಮಾಡಿದ ನಂತರವೇ ಸಬ್ಸಿಡಿ ಬಿಡುಗಡೆಯಾಗುತ್ತದೆ. ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಗೆ ವಾಹನದ ಒನ್ ರೋಡ್ ಬೆಲೆಯ ಶೇ. 50 ಅಥವಾ ಗರಿಷ್ಠ 3 ಲಕ್ಷ ರೂಪಾಯಿ, ಯಾವುದು ಕಡಿಮೆಯೋ ಅದು ಸಿಗುತ್ತದೆ. ಪ್ರಯಾಣಿಕ ಆಟೋ ರಿಕ್ಷಾಗೆ ಸಾಮಾನ್ಯವಾಗಿ ಗರಿಷ್ಠ 75,000 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆಯಬೇಕು. ಆಯ್ಕೆಯಾದವರು ವಾಹನ ಬೆಲೆಯ ಕನಿಷ್ಠ ಶೇ. 10ರಷ್ಟು ತಮ್ಮ ಪಾಲಿನ ವಂತಿಗೆ ಇಡುವಂತೆ ನಿಗಮ ನಿರೀಕ್ಷಿಸುತ್ತದೆ. ಸಬ್ಸಿಡಿ ನೇರವಾಗಿ ಫಲಾನುಭವಿಯ ಖಾತೆಗೆ ಅಥವಾ ವಾಹನ ವಿತರಣೆ ಪ್ರಕ್ರಿಯೆಯಲ್ಲಿ ಜಮಾ ಆಗುತ್ತದೆ. ವಾಹನದೊಂದಿಗೆ ಫಲಾನುಭವಿಯ ಫೋಟೋವನ್ನು ಜಿಲ್ಲಾ ವ್ಯವಸ್ಥಾಪಕರು ದೃಢೀಕರಿಸಬೇಕು.
ಇದು ಉಚಿತ ವಾಹನ ಹಂಚಿಕೆ ಯೋಜನೆಯಲ್ಲ. ಬ್ಯಾಂಕ್ ಸಾಲ ಮಂಜೂರಾತಿ ಇಲ್ಲದೆ ಕೇವಲ ಅರ್ಜಿ ಹಾಕಿದರೆ ಸಬ್ಸಿಡಿ ಬರುವುದಿಲ್ಲ. ಆದ್ದರಿಂದ ಮೊದಲು ಬ್ಯಾಂಕ್ನಲ್ಲಿ ಸಾಲ ಅರ್ಹತೆ ಪರಿಶೀಲಿಸಿಕೊಳ್ಳುವುದು ಒಳಿತು.
ಅರ್ಜಿಗೆ ಬೇಕಾದ ದಾಖಲೆಗಳು.?
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಮೊದಲ ಪುಟ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಚಾಲನಾ ಪರವಾನಗಿ ಪ್ರತಿ, ವಾಹನದ ಅಧಿಕೃತ ಅಂದಾಜು ಪಟ್ಟಿ (ಕೊಟೇಶನ್), ಎರಡು ಪಾಸ್ಪೋರ್ಟ್ ಗಾತ್ರದ ಫೋಟೋ, ಚಾಲ್ತಿ ಮೊಬೈಲ್ ಸಂಖ್ಯೆ ಮತ್ತು ಸ್ವಯಂ ಘೋಷಣಾ ಪತ್ರ ಅಗತ್ಯ.
ಕುಟುಂಬದ ಯಾರೂ ಸರ್ಕಾರಿ ವಾಹನ ಸಾಲ ಅಥವಾ ನಿಗಮ ಯೋಜನೆ ಪಡೆದಿಲ್ಲ ಎಂಬ ಅಫಿಡವಿಟ್ ಕೂಡ ಸಲ್ಲಿಸಬೇಕು. ಎಲ್ಲಾ ಪ್ರಮಾಣಪತ್ರಗಳು ಇತ್ತೀಚಿನವು ಮತ್ತು ಆಧಾರ್ಗೆ ಜೋಡಿಸಿದ ಬ್ಯಾಂಕ್ ಖಾತೆ ಇರಬೇಕು.
ಆನ್ಲೈನ್ ಅರ್ಜಿ ಹೇಗೆ ಹಾಕುವುದು?
ಅಧಿಕೃತ ಪೋರ್ಟಲ್ (https://kmdconline.karnataka.gov.in) ಗೆ ಹೋಗಿ Apply Online ಒತ್ತಿ. 10 ಅಂಕಿಯ ಮೊಬೈಲ್ ನಮೂದಿಸಿ ಒಟಿಪಿ ಪಡೆಯಿರಿ. ಆಧಾರ್ ಪರಿಶೀಲನೆ ಆದ ನಂತರ ಯೋಜನೆಗಳ ಪಟ್ಟಿಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆ ಆಯ್ಕೆ ಮಾಡಿ.
ವೈಯಕ್ತಿಕ, ವಿಳಾಸ, ಬ್ಯಾಂಕ್ ಮತ್ತು ವಾಹನ ವಿವರ ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಿ. ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ. ಅದೇ ಪೋರ್ಟಲ್ನಲ್ಲಿ ಸ್ಥಿತಿ ಪರಿಶೀಲಿಸಬಹುದು.
ಗ್ರಾಮ ಒನ್ ಅಥವಾ ನಗರ ಸೇವಾ ಕೇಂದ್ರಕ್ಕೆ ದಾಖಲೆಗಳೊಂದಿಗೆ ಹೋದರೂ ಸಿಬ್ಬಂದಿ ಅರ್ಜಿ ಸಲ್ಲಿಸಿ ಕೊಡುತ್ತಾರೆ. ಆಯ್ಕೆ ಸಮಿತಿ ದಾಖಲೆ ಪರಿಶೀಲಿಸಿ ಅರ್ಹರ ಪಟ್ಟಿ ಹೊರಡಿಸುತ್ತದೆ. ನಂತರ ಬ್ಯಾಂಕ್ ಸಾಲ ಪತ್ರ ಮತ್ತು ವಾಹನ ಖರೀದಿ ಪೂರೈಸಿದಾಗ ಸಬ್ಸಿಡಿ ಬಿಡುಗಡೆಯಾಗುತ್ತದೆ.
ಸಂದೇಹಕ್ಕೆ ನಿಗಮ ಸಹಾಯವಾಣಿ 080-22860999 ಅಥವಾ ವಾಟ್ಸ್ಆ್ಯಪ್ 08277799990 ಸಂಪರ್ಕಿಸಬಹುದು. ಜಿಲ್ಲಾ ನಿಗಮ ಕಚೇರಿಯಲ್ಲೂ ಮಾಹಿತಿ ಸಿಗುತ್ತದೆ.
ಸೆಪ್ಟೆಂಬರ್ 25ರೊಳಗೆ ಅರ್ಜಿ ಪೂರೈಸದಿದ್ದರೆ ಈ ಸುತ್ತಿನ ಅವಕಾಶ ತಪ್ಪುತ್ತದೆ. ಚಾಲನಾ ಪರವಾನಗಿ ಅವಧಿ ಮುಗಿದಿದ್ದರೆ ಮೊದಲು ನವೀಕರಿಸಿ. ಕೊಟೇಶನ್ ಅಧಿಕೃತ ಶೋರೂಮ್ನಿಂದಲೇ ಪಡೆಯಿರಿ. ಸುಳ್ಳು ದಾಖಲೆ ಹಾಕಿದರೆ ಅರ್ಜಿ ರದ್ದು ಮತ್ತು ಕಾನೂನು ಕ್ರಮ ಸಾಧ್ಯ.
ಚಾಲಕ ವೃತ್ತಿಯಲ್ಲಿರುವವರು ಸ್ವಂತ ವಾಹನ ಪಡೆದು ಆದಾಯ ಹೆಚ್ಚಿಸುವುದು ಈ ಯೋಜನೆಯ ಉದ್ದೇಶ. ಅರ್ಹರು ಕೊನೆಯ ದಿನಕ್ಕೆ ಕಾಯದೆ ಈಗಲೇ ಅರ್ಜಿ ಸಲ್ಲಿಸಿ, ಬ್ಯಾಂಕ್ ಸಾಲ ಪ್ರಕ್ರಿಯೆಯನ್ನೂ ಜೊತೆಗೆ ಆರಂಭಿಸುವುದು ಒಳಿತು.
ಸ್ವಂತ ಮನೆ ಇಲ್ಲದ ಬಡ ಕುಟುಂಬಗಳಿಗೆ ಉಚಿತ ಸೈಟ್ – ಉಚಿತ ಮನೆ ಪಡೆಯಲು ಅರ್ಜಿ ಪ್ರಾರಂಭ! ಆಶ್ರಯ ವಸತಿ ಯೋಜನೆ